ಹುಣಸೂರು: ಸರಕಾರಿ ಅಧಿಕಾರಿಗಳೆಂದರೆ ಅಸಹನೆ, ಆಕ್ರೋಶ ವ್ಯಕ್ತಪಡಿಸುವ ಈ ಕಾಲದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಅಧಿಕಾರಿಗಳನ್ನು ಊರಿಗೆ ಬರಮಾಡಿಕೊಂಡು ಗ್ರಾಮಸ್ಥರೆಲ್ಲ ಸೇರಿ ಸನ್ಮಾನಿಸಿ, ಹಬ್ಬದ ಉಡುಗರೆಗಳನ್ನು ನೀಡಿ ಸಂಭ್ರಮಿಸಿದ್ದಾರೆ. ಇದು ನಡೆದದ್ದು ಹುಣಸೂರು ತಾಲೂಕಿನ ಹೊಸರಾಮನಹಳ್ಳಿ ಗ್ರಾಮದಲ್ಲಿ. ಪಿಡಿಓ ಪರಶುರಾಮಪ್ಪ ಅಗಸನಹಳ್ಳಿ ಮತ್ತು ಕಾರ್ಯದರ್ಶಿ ಶೇಖರ್ ಎಂಬುವರೇ ಗ್ರಾಮಸ್ಥರ ಮನಗೆದ್ದ ಅಧಿಕಾರಿಗಳು.

ಈ ಇಬ್ಬರು ಅಧಿಕಾರಿಗಳ ಕಾರ್ಯದಕ್ಷತೆ, ಪ್ರಾಮಾಣಿಕತೆ ಮತ್ತು ಇಚ್ಛಾಶಕ್ತಿಯಿಂದಾಗಿ ಗ್ರಾಮದ ಸ್ವಚ್ಛತೆ, ರಸ್ತೆ ನಿರ್ವಹಣೆ, ಕುಡಿಯುವ ನೀರಿನ ವ್ಯವಸ್ಥೆ, ಬೀದಿದೀಪ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಗ್ರಾಮಸ್ಥರ ಸಹಕಾರದೊಂದಿಗೆ ಒದಗಿಸಲಾಗುತ್ತಿದ್ದು, ಗ್ರಾಮಸ್ಥರ ಪ್ರತಿ ದೂರನ್ನೂ ಬರೆದಿಟ್ಟುಕೊಂಡು ಒಂದೊಂದೇ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ ಈ ಅಧಿಕಾರಿಗಳು.

ಪಿಡಿಒ ಪರಶುರಾಮಪ್ಪ ಅಗಸನಹಳ್ಳಿ ಮತ್ತು ಕಾರ್ಯದರ್ಶಿ ಶೇಖರ್ ಅವರ ಶ್ರದ್ಧೆ ಮತ್ತು ಕಾರ್ಯವೈಖರಿಗೆ ಮನಸೋತ ಗ್ರಾಮಸ್ಥರು ಈ ಸಂಕ್ರಾಂತಿ ಹಬ್ಬದ ದಿನ ಈ ಇಬ್ಬರು ಅಧಿಕಾರಿಗಳನ್ನು ಊರಿಗೆ ಬರಮಾಡಿಕೊಂಡು ಫಲತಾಂಬೂಲ ನೀಡಿ, ಸನ್ಮಾನಿಸಿ, ಅವರ ಕಾರ್ಯಸೇವೆಯನ್ನು ತುಂಬು ಮನಸ್ಸಿನಿಂದ ಹೊಗಳಿದ್ದಾರೆ. ಇಂತಹ ಅಧಿಕಾರಿಗಳು ಪ್ರತಿ ಹಳ್ಳಿಗೂ ಸಿಗಲಿ ಎಂದು ಆಶಿಸಿದ್ದಾರೆ.

ಸರಕಾರಿ ಕೆಲಸ, ದೇವರ ಕೆಲಸ ಎಂಬು ಭಾವಹಿಸಿ ಕರ್ತವ್ಯ ನಿಷ್ಠೆ ತೋರಿ ಗ್ರಾಮಸ್ಥರ ಹೃದಯ ಗೆದ್ದಿರುವ ಅಧಿಕಾರಿಗಳಿಗೆ ನಮ್ಮ ಅಭಿನಂದನೆ


