ಮೈಸೂರು: ಹುಣಸೂರು ಜಿಲ್ಲೆ ಬಿಳಿಕೆಗೆ ಬಳಿ ಮಧ್ಯರಾತ್ರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪೆಟ್ರೋಲ್ ಬಂಕ್ ದರೋಡೆ ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಕಳೆದ ಎರಡು ತಿಂಗಳ ಹಿಂದೆ ಹುಣಸೂರಿನಲ್ಲಿ ಹಾಡುಹಗಲೇ ಚಿನ್ನದಂಗಡಿಯನ್ನು ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದ ಆರೋಪಿಗಳ ಪೈಕಿ ಮೂವರನ್ನು ಬಂಧಿಸಿದ್ದರೂ, ಸುಮಾರು 10 ಕೋಟಿ ರೂ. ಮೌಲ್ಯದ ಚಿನ್ನಾಭರಣ ಇನ್ನೂ ಪತ್ತೆಯಾಗಿಲ್ಲ.
ಫೆಬ್ರವರಿ 14ರಂದು ಬಿಳಿಕೆರೆ ಬಳಿ ಗದಗೆ ರಸ್ತೆಯ ಪೆಟ್ರೋಲ್ ಬಂಕ್ಗೆ ಪೆಟ್ರೋಲ್ ಹಾಕಿಸಿಕೊಳ್ಳವರಂತೆ ಬಂದು ಅಲ್ಲಿನ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ 15 ಸಾವಿರ ರೂ.ಗಳನ್ನು ಸುಲಿಗೆ ಮಾಡಿ ತಲೆ ಮರೆಸಿಕೊಂಡಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮಂಡ್ಯದ ನಿವಾಸಿ ಲಕ್ಷ್ಮಣ್ ಸೇರಿದಂತೆ ಕಿರಣ್, ಉಮೇಶ್, ರಕ್ಷಿತ್, ಜಯಂತ್ ಬಂಧಿತ ಆರೋಪಿಗಳು. ಈ ಎಲ್ಲ ಆರೋಪಿಗಳು ಬೇರೆ ಬೇರೆ ಜಿಲ್ಲೆಗಳಲ್ಲಿದ್ದರೂ, ಹಿಂದೆ ಮಂಡ್ಯದಲ್ಲಿ ಬೇರೆ ಬೇರೆ ಕೇಸ್ಗಳಲ್ಲಿ ಜೈಲಿನಲ್ಲಿದ್ದ ಇವರು ಸ್ನೇಹಿತರಾಗಿದ್ದಾರೆ. ನಂತರ ಜೈಲಿನಿಂದ ಹೊರ ಬಂದು ಒಟ್ಟಾಗಿ ಕಳ್ಳತನ, ದರೋಡೆ, ಸುಲಿಗೆ ನಡೆಸುತ್ತಿದ್ದರು ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

10 ಕೋಟಿ ರೂ. ಇನ್ನೂ ನಿಗೂಢ:
ಕಳೆದ ಎರಡು ತಿಂಗಳ ಹಿಂದೆ ಹುಣಸೂರಿನ ಸ್ಕೈ ಜ್ಯುವಲರಿಸ್ ಅಂಗಡಿಗೆ ಹಾಡು ಹಗಲೆ ನುಗ್ಗಿ ಸುಮಾರು 10 ಕೋಟಿ ರೂ.ಗಳ ಮೌಲ್ಯದ ಚಿನ್ನಾಭರಣ ದೋಚಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ವಿವಿಧ ರಾಜ್ಯಗಳಿಂದ ಬಂಧಿಸಿ ಕರೆತಂದಿದ್ದರೂ, ಪ್ರಮುಖ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿರುವುದರಿಂದ ಚಿನ್ನಾಭರಣ ಪತ್ತೆಯಾಗಿಲ್ಲ ಎಂದು ಎಸ್ಪಿ ತಿಳಿಸಿದರು.
ಎರಡು ತಿಂಗಳಲ್ಲಿ ಹಲವು ಪ್ರಕರಣ ಪತ್ತೆ:
ಮೈಸೂರು ಜಿಲ್ಲಾ ಪೊಲೀಸರು ಎರಡು ತಿಂಗಳಲ್ಲಿ ಕಾರ್ಯಾಚರಣೆ ನಡೆಸಿ ಹಲವು ಪ್ರಕರಣಗಳನ್ನ ಪತ್ತೆ ಮಾಡಿದ್ದು ನಗದು, ಚಿನ್ನಾಭರಣ, ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು, 2026 ನೇ ಸಾಲಿನ ಜನವರಿ ಮಹೆಯಿಂದ ಫೆಬ್ರವರಿ ಮಾಹೆಯ ವರೆಗೆ 01 ಡಕಾಯಿತಿ, 02 ಸುಲಿಗೆ, 07 ಮನೆ ಕಳ್ಳತನ, 05 ವಾಹನ ಕಳ್ಳತನ. 08 ಸಾಮಾನ್ಯ ಕಳ್ಳತನ, 01 ಜಾನುವಾರು ಪ್ರಕರಣಗಳನ್ನು ಪತ್ತೆ ಮಾಡಿ, ಒಟ್ಟು ರೂ. 29.97.788/- ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 09 ಪ್ರಕರಣಗಳಲ್ಲಿ 279 ಗ್ರಾಂ ಚಿನ್ನದ ಒಡವೆಗಳು ಮತ್ತು 01 ಪ್ರಕರಣದಲ್ಲಿ 30 ಗ್ರಾಂ ಬೆಳ್ಳಿಯ ಕಾಲು ಚೈನು ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಅಂದಾಜು ಮೌಲ್ಯ 10,46,800 ರೂ.ಗಳಾಗಿದೆ ಎಂದು ತಿಳಿಸಿದರು.
ಹಾಗೆಯೇ ಒಟ್ಟು 05 ಪ್ರಕರಣಗಳಲ್ಲಿ 3,76,989 ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 06 ಪ್ರಕರಣಗಳಲ್ಲಿ ಮೂರು ಕಾರು, ಒಂದು ವ್ಯಾನ್ , 4 ಮೋಟಾರ್ ಬೈಕ್ ಸೇರಿ 08 ವಾಹನಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಅಂದಾಜು ಮೌಲ್ಯ 14,33,000/- ರೂಗಳಾಗಿದೆ.
ಒಟ್ಟು 03 ಪ್ರಕರಣಗಳಲ್ಲಿ ಮೋಟಾರ್, ಮೊಬೈಲ್ ಹಾಗೂ ವೈರ್ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ 82,999 ರೂ. ಗಳಾಗಿದೆ. 01 ಪ್ರಕರಣಗಳಲ್ಲಿ 02 ಹಸುಗಳು ಗಳನ್ನು ವಶಪಡಿಸಿಕೊಂಡಿದ್ದು, ಇವರುಗಳ ಒಟ್ಟು ಅಂದಾಜು ಮೌಲ್ಯ 58,000 ರೂ. ಗಳಾಗಿದೆ ಎಂದು ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು. 2026 ನೇ ಸಾಲಿನ ಜನವರಿ ಮಾಹೆಯಿಂದ ಮಾರ್ಚ್ ಮಾಹೆವರೆಗೆ ಎನ್.ಡಿ.ಪಿ.ಎಸ್ ಕಾಯ್ದೆ ಅಡಿ 55 ಪ್ರಕರಣಗಳನ್ನು ದಾಖಲಿಸಿದ್ದು, 1 ಕೆ.ಜಿ. 860 ಗ್ರಾಂ ಗಾಂಜಾ ಮತ್ತು ಎಂ.ಡಿ.ಎಂ.ಎ .010 ಎಂ.ಎಲ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 56 ಜನರುಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 2026 ನೇ ಸಾಲಿನ ಜನವರಿ ಮಾಹೆಯಿಂದ ಮಾರ್ಚ್ ಮಾಹೆವರೆಗೆ ಲಾಟರಿ ಕಾಯ್ದೆ ಅಡಿ ಒಟ್ಟು 14 ಪ್ರಕರಣಗಳನ್ನು ದಾಖಲಿಸಿದ್ದು, 2,26,707 ರೂ. ಮೊತ್ತದ ಲಾಟರಿ ಟಿಕೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.


