ಮೈಸೂರು: ಮೈಸೂರು ನಗರದ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಆತಂಕದ ವಾರಾವರಣ ನಿರ್ಮಾಣಗೊಂಡು ಕೋರ್ಟ್ ಕಲಾಪಗಳಿಗೆ ಅಡಚಣೆ ಉಂಟಾದ ಪ್ರಸಂಗ ಜರುಗಿದೆ.
ಇಂದು ಬೆಳಗ್ಗೆ ಬಾಂಬ್ ಕರೆ ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ಚಾನ ದಳ ಆಗಮಿಸಿ ಪರಿಶೀಲನೆ ನಡೆಸಿದರು.
ಮೈಸೂರು ನಗರದ ಥಿಯೋಬಾಲ್ಡ್ ರಸ್ತೆಯ ಹಳೇ ಕೋರ್ಟ್ ಹಾಗೂ ಜಯನಗರದ ಹೊಸ ಕೋರ್ಟ್ ಎರಡಕ್ಕೂ ಮೇಲ್ ಸಂದೇಶ ಕಳುಹಿಸಿರುವ ಅನಾಮಿಕರು ಮಂಗಳವಾರ ಬೆಳಗ್ಗೆ 11 ಗಂಟೆ ಬಾಂಬ್ ಸ್ಪೋಟಗೊಳ್ಳುವುದಾಗಿ ಬೆದರಿಸಿದ್ದಾರೆ.
ಮಾಹಿತಿ ತಿಳಿದು ಎಲ್ಲ ಕೋರ್ಟ್ ಗಳ ನ್ಯಾಯಾಧೀಶರು, ವಕೀಲರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಯಿತು. ಬಾಂಬ್ ಬೆದರಿಕೆ ಸುದ್ದಿಯಿಂದ ಕಕ್ಷಿದಾರರು, ಸಾರ್ವಜನಿಕರು ಆತಂಕದಿಂದ ನ್ಯಾಯಾಲಯಗಳಿಂದ ಹೊರ ನಡೆದರು.


