Online News in ಕನ್ನಡ

ಧರ್ಮಸ್ಥಳ: ಶವಗಳ ಶೋಧನೆಯಲ್ಲಿ ದಾರಿ ತಪ್ಪಿಸಲು ಅಧಿಕಾರಿಗಳು ಯತ್ನ ?

ಧರ್ಮಸ್ಥಳ, ಆಗಸ್ಟ್ 5 – ಶವಗಳ ಪತ್ತೆಗೆ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶೋಧ ಕಾರ್ಯವನ್ನು ದಾರಿ ತಪ್ಪಿಸಲು ಕೆಲ ಅಧಿಕಾರಿಗಳು ಪ್ರಯತ್ನಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಧರ್ಮಸ್ಥಳದಲ್ಲಿ ಅನೇಕ ಶವ ಹೂತಿಡಲಾಗಿದೆ ಎಂಬ ಅನಾಮಿಕ ವ್ಯಕ್ತಿಯ ದೂರಿನ ಮೇರೆಗೆ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಅಧಿಕಾರಿಗಳಿಗೆ ಸಹಾಯಕ ಪೊಲೀಸ್‌‍ ಆಯುಕ್ತರೊಬ್ಬರು ದಿಕ್ಕು ತಪ್ಪಿಸಿದ ಪ್ರಸಂಗ ಬೆಳಕಿಗೆ ಬಂದಿದೆ.

ಸೋಮವಾರ ಧರ್ಮಸ್ಥಳದ ಸ್ನಾನಘಟ್ಟದ 11 ನೇ ಸ್ಥಳದಲ್ಲಿ ಎಸ್‌‍ಐಟಿ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ, ಬೆಳ್ತಂಗಡಿ ತಹಸೀಲ್ದಾರಿ ಸೇರಿದಂತೆ ಮತ್ತಿತರರ ಸಮುಖದಲ್ಲಿ ಉತ್ಖನನ ಕಾರ್ಯ ನಡೆಸುತ್ತಿದ್ದರು. ಅನಾಮಧೇಯ ವ್ಯಕ್ತಿ ನೀಡಿದ ದೂರಿನಂತೆ 11ನೇ ಸ್ಥಳವಾದ ಸ್ನಾನಘಟ್ಟದಲ್ಲಿ ಉತ್ಖನನ ಕಾರ್ಯ ನಡೆಸುವ ಬದಲು ಎಸಿಯವರು ಬೇರೊಂದು ಸ್ಥಳವನ್ನು ಗುರುತಿಸಿ ಇಲ್ಲಿಯೇ ಉತ್ಖನನ ನಡೆಸಬೇಕೆಂದು ಕಾರ್ಮಿಕರಿಗೆ ಸೂಚನೆ ಕೊಟ್ಟಿದ್ದರು. ಇದು ಸ್ಥಳದಲ್ಲಿದ್ದ ಎಸ್‌‍ಐಟಿ ಅಧಿಕಾರಿಗಳಿಗೂ ತಕ್ಷಣವೇ ಹೊಳೆದಿರಲಿಲ್ಲ.

ಎಸಿ ಯವರು ಯಾವ ಕಾರಣಕ್ಕಾಗಿ 11ನೇ ಸ್ಥಳವನ್ನು ಬಿಟ್ಟು ಬೇರೊಂದು ಕಡೆ ಉತ್ಖನನ ನಡೆಸಿದರು ಎಂಬುದು ನಿಗೂಢವಾಗಿಯೇ ಉಳಿದಿದೆ. ಕೆಲವೇ ಮೀಟರ್‌ಗಳ ಅಂತರದಲ್ಲಿ ಉತ್ಖನನ ನಡೆಯುತ್ತಿದ್ದ ವೇಳೆ ಮಾನವನ ಅಸ್ಥಿಪಂಜರ ಪತ್ತೆಯಾಗಿತ್ತು. ಈಗ ಎಸಿ ನಡೆ ಹಲವು ಸಂಶಯಗಳನ್ನು ಹುಟ್ಟುಹಾಕಿದ್ದು, ಎಸ್‌‍ಐಟಿ ಅಧಿಕಾರಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.

Call Now Button