ಮೈಸೂರು: ಇದೊಂದು ಅಪಘಾತ, ಇದನ್ನು ನಾನು ಕಾನೂನು ಸುವ್ಯವಸ್ಥೆಯ ವೈಫಲ್ಯ ಎಂದು ಹೇಳುವುದಿಲ್ಲ. ಈ ವಿಚಾರದಲ್ಲಿ ರಾಜಕೀಯವನ್ನೂ ಮಾಡುವುದಿಲ್ಲ. ಆದರೆ, ಮೈಸೂರು ಅರಮನೆಯ ಸುತ್ತ ವ್ಯಾಪಾರ ಮಾಡುತ್ತಿರುವ ಅಸಂಘಟಿತ ಸಣ್ಣ ವ್ಯಾಪಾರಿಗಳಿಗೆ ಮಾನ್ಯತೆ ನೀಡಿ ಪ್ರತ್ಯೇಕ ವ್ಯಾಪರ ವಲಯ ನಿರ್ಮಾಣವಾಗಬೇಕೆಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಅರಮನೆ ಬಳಿ ಬಲೂನ್ ಸಿಲೆಂಡರ್ ಸ್ಪೋಟದ ಸಂಬಂಧ ಗಾಯಗೊಂಡು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಗಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಸಂಸದರು, ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಮೃತರಿಗೆ ಮತ್ತು ಗಾಯಾಳುಗಳಿಗೆ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಮೇಲ್ನೋಟಕ್ಕೆ ಏನೇ ಆಗಿದ್ದರೂ, ಈ ಘಟನೆ ಆಕಸ್ಮಿಕವೋ ? ಅಥವಾ ಉದ್ದೇಶಪೂರ್ವಕವೋ ಎಂಬ ಬಗ್ಗೆ ತನಿಖಾ ವರದಿಯ ನಂತರವಷ್ಟೇ ಹೇಳಬಹುದು. ನಡೆದಿರುವ ಈ ಘಟನೆ ಮೈಸೂರಿನ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇತ್ತೀಚೆಗೆ ಹಂಪಿಯಲ್ಲೂ ಒಂದು ಕೊಲೆ ನಡೆದಿದ್ದರಿಂದ ಶೇ.೮೦ರಷ್ಟು ಪ್ರವಾಸೋದ್ಯಮ ಇಳಿಕೆಯಾಯಿತು. ಆ ಸ್ಥಿತಿ ಮೈಸೂರಿಗೆ ಬರಬಾರದು. ಮೈಸೂರು ನಗರಕ್ಕೆ ಬರುವ ಪ್ರವಾಸಿಗರಿಗೆ ಸೂಕ್ತ ಸುರಕ್ಷತೆ ಒದಗಿಸಬೇಕೆಂದು ಆಗ್ರಹಿಸಿದರು.


