ಮೈಸೂರು: ತಮಿಳುನಾಡಿನ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ನಾಯಕ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾರ್ಗ ಮಧ್ಯದಲ್ಲಿ ಮೈಸೂರಿಗೆ ಭೇಟಿ ನೀಡಿದ್ದರು. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬರಮಾಡಿಕೊಂಡರು.

ರಾಹುಲ್ ಗಾಂಧಿ ಅವರ ಮೈಸೂರು ಭೇಟಿ ಬಗ್ಗೆ ಮಾಧ್ಯಮಗಳು ಕೆಲ ಊಹಾ ಸುದ್ದಿಗಳನ್ನು ಬಿತ್ತರಿಸಿದರೂ, ಯಾವುದೇ ರೀತಿಯ ಮಾತುಕತೆ, ಚರ್ಚೆಗಳು ನಡೆಯಲಿಲ್ಲ.
ಕೇವಲ 3-4 ನಿಮಿಷಗಳ ಕಾಲ ಮಾತ್ರ ಲಭ್ಯವಿದ್ದ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿಗಳ ಸ್ವಾಗತವನ್ನು ಸ್ವೀಕರಿಸಿ ಮತ್ತೊಂದು ವಿಶೇಷ ಹೆಲಿಕ್ಯಾಫ್ಟರ್ನಲ್ಲಿ ತಮಿಳುನಾಡಿಗೆ ತೆರಳಿದರು.

ಚಾಮರಾನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಚಿವರಾದ ಜಾರ್ಜ್ ಮತ್ತು ಸ್ಥಳೀಯ ಮುಖಂಡರು ಹಾಜರಿದ್ದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಏನೇ ಇದ್ರೂ ನಾನು ಮತ್ತು ಡಿಸಿಎಂ ಮಾತನಾಡಿಕೊಳ್ಳುತ್ತೇವೆ. ಮಾಹಿತಿ ಇಲ್ಲದೆ ಕೆಲ ಶಾಸಕರು ಮಾತನಾಡಬಹುದು ಅಷ್ಟೆ ಎಂದರು. ಅಲ್ಲದೆ, ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.


