ಮೈಸೂರು: ಇಲ್ಲಿನ ಮೈಸೂರು ವಿಶ್ವ ವಿದ್ಯಾ ನಿಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶೈಕ್ಷಣಿಕ ಸಭಾಂಗಣ ಕ್ರಾಫರ್ಡ್ ಭವನದಲ್ಲಿ ನಡೆಸಲಾಯಿತು. ಕುಲಪತಿಗಳಾದ ಪ್ರೊ. ಎನ್. ಕೆ. ಲೋಕನಾಥ್ ಅವರು ಪುಷ್ಪಾರ್ಚನೆ ಮಾಡಿ ವಾಲ್ಮೀಕಿಯವರ ರಾಮಾಯಣ ಕೃತಿಯು ಅಂದಿನ ಕಾಲದಲ್ಲೇ ವೈಜ್ಞಾನಿಕ ಪ್ರಬುದ್ಧತೆ ಸಾಧಿಸಿರುವುದಕ್ಕೆ ಸಾಕ್ಷಿಯಾಗಿದೆ. ಪುಷ್ಪಕ ವಿಮಾನದ ತಂತ್ರಜ್ಞಾನ ಅಂದೇ ಇದ್ದುದನ್ನು ವಾಲ್ಮೀಕಿ ದಾಖಲಿಸುತ್ತಾರೆ. ಯುವ ಜನಾಂಗ ಇಂದು ರಾಮಾಯಣವನ್ನು ವಿಭಿನ್ನ ದೃಷ್ಟಿಕೋನಗಳಿಂದ ಓದಬೇಕು ಎಂದರು.
ಕುಲಸಚಿವರಾದ ಸವಿತಾ ಎಂ.ಕೆ ಅವರು ಮಾತನಾಡಿ, ವಾಲ್ಮೀಕಿಯವರು ಜಗದ ಕವಿ. ಅವರ ರಾಮಾಯಣ ಕಾವ್ಯದ ಸೇತುವೆ ಕಟ್ಟಿದ ಘಟನೆ AI ನಿಂದ ಸಾಬೀತು ಪಡಿಸಲು ಶೋಧನೆ ನಡೆಯುತ್ತಿದೆ. ಸದಾ ಚರ್ಚೆಗೆ ಒಳಗಾಗಿರುವ ಕೃತಿ ರಾಮಾಯಣ ಎಂದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಸ್. ಕೆ. ಲೋಲಾಕ್ಷಿ ಪ್ರಾಸ್ತಾವಿಕ ಮಾತನಾಡಿ, ವಾಲ್ಮೀಕಿ ಜಗತ್ತಿನ ಆದಿಕವಿ ರಾಮಾಯಣ ಆದಿಕಾವ್ಯ ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು. ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಪ್ರಾಧ್ಯಾಪಕೇತರರು ಮತ್ತು ಸಂಶೋಧಕರು ಉಪಸ್ಥಿತರಿದ್ದರು.


