ಮೈಸೂರು, ಆ.09 – ವೈ. ರಾಮಕೃಷ್ಣ ಅವರು ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದು, ಅವರ ಸೇವೆ ಮತ್ತು ಹೋರಾಟ ಇಂದಿಗೂ ಸಹ ಸ್ಮರಣೀಯವಾಗಿದೆ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ. ಹೆಚ್. ಮುನಿಯಪ್ಪ ಅವರು ಹೇಳಿದರು.
ಇಂದು ಡಾ. ಬಾಬೂ ಜಗಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತೀರ್ಣ ಕೇಂದ್ರ, ಮಾನಸಗಂಗೋತ್ರಿ ಮೈಸೂರು ಇವರ ವತಿಯಿಂದ ರಾಣಿ ಬಹಾದ್ದೂರ್ ಸಭಾಂಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ವೈ. ರಾಮಕೃಷ್ಣ ಅವರ ಸಾಧನೆ ( ಬದುಕು, ಸಂಘಟನೆ ಮತ್ತು ರಾಜಕಾರಣ) ಎಂಬ ವಿಷಯ ಕುರಿತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಇವರು ವಿಧಾನ ಸಭೆಯಲ್ಲಿ ಮಾತನಾಡುವಂತಹ ಶೈಲಿಯೇ ಆಕರ್ಷಣೆಯಾಗಿತ್ತು. ರಾಜಕೀಯ ಪಕ್ಷಗಳು ಇವರನ್ನು ನಾಯಕನಾಗಿ ಮಾಡಿಕೊಳ್ಳಬೇಕೆಂದು ಪ್ರೋತ್ಸಾಹ ನೀಡುತ್ತಿದ್ದರು. ಇವರ ನಡವಳಿಕೆ, ಭಾಷಣಗಳು, ಕಮಿಟ್ ಮೆಂಟ್ ಗಳು ಇವರನ್ನು ಇಲ್ಲಿಯವರೆಗೂ ಕರೆತಂದಿತು. ಇವರು ಯಾರ ಜೊತೆ ಇದ್ದರೂ ರಾಯಲ್ ಆಗಿ ಸಿನ್ಸಿಯರ್ ಆಗಿ ಇರುತ್ತಿದ್ದರು ಎಂದು ಹೇಳಿದರು.
ಇವರು ಕರ್ನಾಟಕದ ಜನಪ್ರಿಯ ರಾಜಕಾರಣಿಯಾಗಿದ್ದರು. ಸಾಮಾಜಿಕ ಸುಧಾರಣೆಗಾಗಿ , ಬದ್ಧತೆಗಾಗಿ, ಸಮಾಜದಲ್ಲಿ ಸುಧಾರಣೆ ತರಬೇಕೆಂದು ಹೋರಾಡಿದವರು ಹಾಗೂ ಸಾರ್ವಜನಿಕರ ಹಿತಾಸಕ್ತಿಗಾಗಿ ಶ್ರಮಿಸಿದವರು ವೈ. ರಾಮಕೃಷ್ಣ ಅವರು ಎಂದು ತಿಳಿಸಿದರು.
ಮಾಜಿ ಕೇಂದ್ರ ಸಚಿವರಾದ ಸಿ. ಎಂ. ಇಬ್ರಾಹಿಂ ಅವರು ಮಾತನಾಡಿ ಒಳಮೀಸಲಾತಿಗಾಗಿ ಹೆಚ್ಚು ಹೋರಾಟಮಾಡಿದವರು ವೈ.ರಾಮಕೃಷ್ಣ ಅವರು ಒಳಮೀಸಲಾತಿಗಾಗಿ ಉತ್ತಮವಾದಂತಹ ಕೊಡುಗೆ ನೀಡಿದ್ದಾರೆ ಇಂತಹ ಲೀಡರ್ ಕರ್ನಾಟಕದಲ್ಲಿ ಹುಟ್ಟಿರುವುದು ನಮ್ಮ ಹೆಮ್ಮೆ ಎಂದು ಹೇಳಿದರು.
ನಾವೆಲ್ಲರೂ ಜಾತಿ ಜಾತಿ ಎಂದು ಬೇಧ ಭಾವ ಮಾಡದೆ ಎಲ್ಲರೂ ಒಗ್ಗಟ್ಟಾಗಿ ಸಮಬಾಳ್ವೆಯಿಂದ ಬದುಕಬೇಕು. ಜೊತೆಗೆ ಇಂತಹ ಮಹಾನ್ ವ್ಯಕ್ತಿಗಳ ಹೆಸರು ಸವಿನೆನಪಾಗಿ ಉಳಿಯುವಂತೆ ಮಾಡಬೇಕು ಎಂದರು.
ಇವರು ವಿಧಾನ ಸೌಧದಲ್ಲಿ ನಿಂತು ಮಾತನಾಡುತ್ತಿದ್ದರೆ ವೈ ರಾಮಕೃಷ್ಣ ಎಂದು ಕಾಣುತ್ತಿರಲಿಲ್ಲ ವೈ ರಾಮಕೃಷ್ಣ ರಾವ್ ಎಂದು ಕಾಣುತ್ತಿದ್ದರು. ಇವರು ವಿಧಾನ ಸೌಧದಲ್ಲಿ ಮಾಡಿದಂತಹ ಹೆಸರು ಬೇರೆ ಯಾರು ಸಹ ಮಾಡಿಲ್ಲ. ಈ ಸಮಾಜದಲ್ಲಿ ಪ್ರಾಮಾಣಿಕ ರಾಜಕಾರಣಿ ಇದ್ದರು ಎಂದರೆ ಅವರೇ ವೈ. ರಾಮಕೃಷ್ಣ ಅವರು ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಎನ್. ಕೆ ಲೋಕನಾಥ್ ಅವರು ಮಾತನಾಡಿ ವೈ.ರಾಮಕೃಷ್ಣ ಅವರು ಸಮಾಜದಲ್ಲಿ ಏನೆಲ್ಲ ಸುಧಾರಣೆ
ಮಾಡಿದ್ದರೆ ಎಂಬುದನೆಲ್ಲ ನಾವು ಸ್ಮರಿಸಬೇಕು. ಅವರು ಮಾಡಿರುವಂತಹ ಕೆಲಸದ ಮೇಲೆ ಗೌರವವನ್ನು ಇಡಬೇಕು. ಅವರು ನಡೆದುಬಂದಂತಹ ಹಾದಿಯಲ್ಲಿ ನಾವು ನಡೆಯಬೇಕು ಅವರು ಹೇಳಿರುವಂತಹ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸೋಮಶೇಖರ್, ಎಂ.ಶಿವಣ್ಣ, ವಿಶ್ವನಾಥ್, ಕೆ. ಪಿ.ಸಿ.ಸಿ..ಎಸ್. ಸಿ. ರಾಜ್ಯ ಘಟಕದ ಅಧ್ಯಕ್ಷರಾದ ಆರ್.ಧರ್ಮಸೇನಾ, ಮತಂಗ ಫೌಂಡೇಶನ್ ನ ಅಧ್ಯಕ್ಷರಾದ ಆರ್.ಲೋಕೇಶ್, ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಕೆ.ಸದಾಶಿವ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


