ಚಾಮರಾಜನಗರ, ಆಗಸ್ಟ್ 17, ಧರ್ಮಸ್ಥಳದಲ್ಲಿ ಮೃತ ದೇಹಗಳ ಅಸ್ಥಿಪಂಜರ ಶೋಧನೆಗೆ ಸಂಬಂಧಿಸಿದಂತೆ ಈವರೆಗೆ ಎಸ್ಐಟಿ ನಡೆಸಿರುವ ತನಿಖೆ ಮತ್ತು ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳಿಗೆಲ್ಲ ನಾಳೆ (ಆ.18) ಸದನದಲ್ಲಿ ಉತ್ತರ ನೀಡುತ್ತೇನೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಆಮೂಲಕ ಕಳೆದ ಹಲವು ದಿನಗಳಿಂದ ಧರ್ಮಸ್ಥಳದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವ ಹೆಣ್ಣು ಮಕ್ಕಳ ಅತ್ಯಾಚಾರ, ಹತ್ಯೆ ಆರೋಪಗಳಿಗೆ ಸರಕಾರ ಅಧಿಕೃತ ಮಾಹಿತಿ ನೀಡಿದಂತ್ತಾಗಲಿದೆ.
ಅನೇಕ ದೂರುಗಳು ಬಂದ ಹಿನ್ನಲ್ಲೆಯಲ್ಲಿ ಎಸ್ಐಟಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೂ ರಾಜಕೀಯ ಮಾಡಬಾರದು. ಎಸ್ಐಟಿ ತನಿಖೆಯಲ್ಲಿ ಸರಕಾರವಾಗಲಿ, ನಾನಾಗಲಿ ಹಸ್ತಕ್ಷೇಪ ಮಾಡುವುದಿಲ್ಲ. ಇದನ್ನು ಮುಖ್ಯಮಂತ್ರಿಗಳೂ ಹೇಳಿದ್ದಾರೆ. ಆದರೆ, ಬಿಜೆಪಿ ಅವರು ಇದನ್ನು ಧಾರ್ಮಿಕ ವಿಷಯಕ್ಕೆ ತಿರುಗಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


