ಬೆಂಗಳೂರು: `ನಾನು ಯಾರ ಬಳಿಯೂ ನನಗೆ ಮುಖ್ಯಮಂತ್ರಿ ಮಾಡಿ ಎಂದು ಕೇಳಿಲ್ಲ. ಅಧಿಕಾರ ಹಂಚಿಕೆ ಎನ್ನುವುದು ಐದಾರು ಜನರ ನಡುವೆ ನಡೆದ ಗುಟ್ಟಿನ ವ್ಯಾಪಾರ. ಅದನ್ನು ನನ್ನ ಬಾಯಲ್ಲಿ ಹೇಳುವುದಿಲ್ಲ. ನಾನು ಆತ್ಮಸಾಕ್ಷಿಯಂತೆ ನಡೆದುಕೊಳ್ಳುವವನು’. ಹೀಗೆ ಮಾರ್ಮಿಕತೆಯ ಮಾತುಗಳನ್ನು ಆಡಿದವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಆಮೂಲಕ ಪರೋಕ್ಷವಾಗಿ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಪಕ್ಷಕ್ಕೆ ಮುಜುಗರ ತರುವಂತೆ ನಡೆದುಕೊಳ್ಳುವುದಿಲ್ಲ. ಪಕ್ಷವನ್ನು ವೀಕ್ ಮಾಡಲು ಬಿಡುವುದಿಲ್ಲ ಎಂದರು.
ನಾನು ಹೆಚ್.ಸಿ. ಮಹಾದೇವಪ್ಪ ಅವರ ಕ್ಷೇತ್ರಕ್ಕೂ ಹೋಗಿ ಪ್ರಚಾರ ಮಾಡಿದ್ದೇನೆ. ನನ್ನ ಮುಖ ನೋಡಿ ಓಟು ಕೊಡಿ ಎಂದು ಕೇಳಿದ್ದೀನಿ. ಹಾಗೆಯೆ ಮಂಡ್ಯ ಮತ್ತಿತರ ಕಡೆಗಳಲ್ಲಿ ನಾನು ಓಟು ಕೇಳಿದ್ದೀನಿ’
– ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
ಎಲ್ಲರಿಗಿಂತ ಕಾರ್ಯಕರ್ತರು ದೊಡ್ಡವರು. ಅವರು ಬಾವುಟ ಕಟ್ಟಿ, ಬಡಿದಾಡಿ, ಕೇಸು ಹಾಕಿಸಿಕೊಂಡು, ಪ್ರಾಣಕೊಟ್ಟು ಹೋರಾಡಿದ್ದರಿಂದ ನಾವು ಅಧಿಕಾರ ಬಂದಿದ್ದೇವೆ. ಕಾರ್ಯಕರ್ತರ ಶ್ರಮದ ಫಲವನ್ನು ಶಾಸಕರು ಅನುಭವಿಸುತ್ತಿದ್ದಾರೆ. ನಾನು ಹೆಚ್.ಸಿ. ಮಹಾದೇವಪ್ಪ ಅವರ ಕ್ಷೇತ್ರಕ್ಕೂ ಹೋಗಿ ಪ್ರಚಾರ ಮಾಡಿದ್ದೇನೆ. ನನ್ನ ಮುಖ ನೋಡಿ ಓಟು ಕೊಡಿ ಎಂದು ಕೇಳಿದ್ದೀನಿ. ಹಾಗೆಯೆ ಮಂಡ್ಯ ಮತ್ತಿತರ ಕಡೆಗಳಲ್ಲಿ ನಾನು ಓಟು ಕೇಳಿದ್ದೀನಿ’ ಕಾವೇರಿ ನೀರಿಗಾಗಿ ನಡೆದ ಜನಾಂದೋಲನದಲ್ಲಿ ನನ್ನ ಕಾರ್ಯಕರ್ತರು ಊಟ, ತಿಂಡಿ, ನೀರು ಕೊಟ್ಟು ನಮ್ಮ ಜೊತೆ ಹಜ್ಜೆ ಹಾಕಿದ್ದಾರೆ. `ನಮ್ಮ ನೀರು ನಮ್ಮ ಹಕ್ಕು’ ಹೋರಾಟಗಳಿಂದಾಗಿ ಜನ ನಮಗೆ ಓಟು ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ ಎಂದು ನುಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯರು. ಏಳೂವರೆ ವರ್ಷ ಮುಖ್ಯಮಂತ್ರಿ ಆಗಿದ್ದಾರೆ. ವಿರೋಧ ಪಕ್ಷದ ನಾಯಕರೂ ಆಗಿದ್ದರು. ಈಗ ಮುಂದೆಯೂ ಬಜೆಟ್ ಮಂಡಿಸುವುದಾಗಿ ಹೇಳುತ್ತಿದ್ದಾರೆ. ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ ಎಂದು ಮತ್ತೊಮಮ್ಮೆ ಮಾರ್ಮಿಕ ನುಡಿಗಳನ್ನಾಡಿದರು.


