ದಾವಣಗೆರೆ: ʻನಾನು ಸಾಲದ ರಾಮಯ್ಯ ಅಲ್ಲ, ಅನ್ನದ ರಾಮಯ್ಯʼ ಎಂದು ಸಂದೇಶ ನೀಡುವ ಮೂಲಕ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಮಾಡುತ್ತಿರುವ ಸಾಲದ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ನಾಗನೂರು, ಶರಮಗೊಂಡನಳ್ಳಿ, ತುರ್ಚಘಟ್ಟ, ಹದಡಿ ಮುಂತಾದ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ರೋಡ್ ಶೋ ನಡೆಸಿ ಮತಯಾಚಿಸಿ ಮಾತನಾಡಿದರು.
ಬಿಜೆಪಿಯವರು ನನ್ನನ್ನು ಸಾಲದ ರಾಮಯ್ಯ ಅಂತಾರೆ. ಈ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ನಾನು ಅನ್ನದ ರಾಮಯ್ಯ ಎನ್ನುವುದನ್ನು ತೋರಿಸಿ. ಕಾಂಗ್ರೆಸ್ ಮಹಾತ್ಮಗಾಂಧಿ, ಅಂಬೇಡ್ಕರ್, ಬಸವಣ್ಣನವರ ಆಶಯದ ಹಾದಿಯಲ್ಲಿ ನಡೆದರೆ, ಬಿಜೆಪಿ ಗೋಡ್ಸೆ ಮಾತಿನಂತೆ ನಡೆಯುತ್ತದೆ ಎಂದರು.
ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ, ದೇವೇಗೌಡ ಅವರ ಮಕ್ಕಳು, ಮೊಮ್ಮಕ್ಕಳು ಚುನಾವಣೆಗೆ ಸ್ಪರ್ಧಿಸುತ್ತಿಲ್ಲವೇ ? ಅದು ಕುಟುಂಬ ರಾಜಕಾರಣ ಅಲ್ಲವೇ ಎಂದು ಪ್ರಶ್ನಿಸಿದರು.
ಸಮರ್ಥ್ ಅತ್ಯಂತ ವಿದ್ಯಾವಂತ ಮತ್ತು ರಾಜಕಾರಣದ ಎಲ್ಲ ಅರ್ಹತೆಗಳಿರುವ ಸಮರ್ಥ ಅಭ್ಯರ್ಥಿ. ಇವರು ಗೆದ್ದು ನಿಮ್ಮ ಪರವಾಗಿ ಕೆಲಸ ಮಾಡುತ್ತಾರೆ. ಎಲ್ಲಾ ಜನಪರ ಗುಣಗಳು ಸಮರ್ಥ್ ಅವರಲ್ಲಿದೆ ಎಂದರು.
ದಾವಣಗೆರೆಗೆ ಶಾಮನೂರು ಕೊಡುಗೆ ಸಾಕಷ್ಟಿದೆ. ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಗೆಲ್ಲುತ್ತಾರೆ. ಗ್ಯಾರಂಟಿ ಯೋಜನೆಗಳಿಗೆ 1.43 ಲಕ್ಷ ಕೋಟಿ ರೂ. ಹಣ ಖರ್ಚು ಮಾಡಿದ್ದೇವೆ. ಸಮರ್ಥ ಶಾಮನೂರು ಗೆದ್ದರೆ ನನಗೆ ಶಕ್ತಿ ಬರುತ್ತದೆ ಎಂದರು.
ದಾವಣಗೆರೆಗೆ ಮಾತ್ರವೇ 538 ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗಾಗಿ ಖರ್ಚು ಮಾಡಿದ್ದೇವೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ಅಷ್ಟೂ ಹಣ ದಾವಣಗೆರೆ ಜನರ ಬದುಕಿಗೆ ಜಮೆ ಆಗಿದೆ. ಈ ಹಣ ಕೊಟ್ಟಿದ್ದನ್ನು ಬಿಜೆಪಿಯವರು ವಿರೋಧಿಸಿದ್ದರು. ಜನರ ಹಣವನ್ನು ಜನರಿಗೆ ವಾಪಾಸ್ ಕೊಡುವುದು ತಪ್ಪಾ ಎಂದರು.
ಬಿಜೆಪಿ 2018 ರಲ್ಲಿ ತಮ್ಮ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿ ಇದರಲ್ಲಿ ಹತ್ತು ಪರ್ಸೆಂಟ್ ಕೂಡ ಭರವಸೆ ಈಡೇರಿಸಲಿಲ್ಲ. ಆದರೆ 2013 ರಲ್ಲಿ ನಾವು ನಮ್ಮ ಪ್ರಣಾಳಿಕೆಯಲ್ಲಿ 165 ಭರವಸೆ ನೀಡಿ ಅದರಲ್ಲಿ 158 ಈಡೇರಿಸಿ ನುಡಿದಂತೆ ನಡೆದಿದ್ದೇವೆ. 2023. ರಲ್ಲೂ ನಾವು ಐದು ಗ್ಯಾರಂಟಿಗಳನ್ನು ಘೋಷಿಸಿ ಐದಕ್ಕೆ ಐದೂ ಜಾರಿ ಮಾಡಿದ್ದೇವೆ ಎಂದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಜನರ ಕೆಲಸ ಮಾಡಲಿಲ್ಲ. ಕಾಂಗ್ರೆಸ್ ಸರ್ವ ಜಾತಿ ಜನಾಂಗಗಳನ್ನು ಒಟ್ಟಿಗೇ ಕರೆದೊಯ್ಯುತ್ತದೆ. ನಮ್ಮ ಗ್ಯಾರಂಟಿಗಳ ಫಲವನ್ನು ಎಲ್ಲಾ ಪಕ್ಷದವರೂ, ಎಲ್ಲಾ ಜಾತಿ, ಎಲ್ಲಾ ಧರ್ಮದವರೂ ಪಡೆಯುತ್ತಿದ್ದಾರೆ. ಆದ್ದರಿಂದ ನಮ್ಮದು “ಸರ್ವ ಜನಾಂಗದ ಶಾಂತಿಯ ತೋಟ” ಎಂದರು.
ಆದ್ದರಿಂದ ದಲಿತರು, ಹಿಂದುಳಿದವರು, ಶ್ರಮಿಕರು, ಮಹಿಳೆಯರು ಎಲ್ಲಾ ಧರ್ಮದವರ ಪಕ್ಷ. ಆದ್ದರಿಂದ ಎಲ್ಲರಿಗೂ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.
ನಮ್ಮ ಮೂಲ ಉದ್ದೇಶ ತಳ ಸಮುದಾಯದ ಅಭಿವೃದ್ದಿ. ಬಸವಣ್ಣ ಅವರ ಪರಿಕಲ್ಪನೆಯಲ್ಲಿ ನಾವು ಸರ್ಕಾರ ನಡೆಸುತ್ತಿದ್ದೇವೆ. ಮಧ್ಯವರ್ತಿಗಳ ಕಾಟ ಇಲ್ಲದೆ ಬಡವರ ಖಾತೆಗೆ ಹಣ ಹಾಕುತ್ತಿದ್ದೇವೆ ಎಂದರು.
ಗ್ಯಾರಂಟಿಯಿಂದ ಖಜಾನೆ ಖಾಲಿ ಎಂಬ ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ನಾವು 1.40 ಕೋಟಿ ರೂ ಸಾಲ ಮಾಡಿದ್ದೇವೆ. ಬಿಜೆಪಿಯವರು 5.30 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ ಎಂದು ವಿವರಿಸಿದರು.

