ಮೈಸೂರು: ʻ ನೀವು ಎಷ್ಟೇ ಭಾರಿ ಪ್ರಶ್ನೆ ಕೇಳಿದ್ರೂ ನನ್ನ ಉತ್ತರ ಒಂದೆ, ನಾನು ಹೈಕಮಾಂಡ್ ಮಾತನ್ನು ಮಾತ್ರ ಕೇಳೋದು, ಅವರು ಹೇಳಿದ್ರೆ ನಾನು ಐದು ವರ್ಷ ಮುಖ್ಯಮಂತ್ರಿಯಾಗಿ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಮೈಸೂರಿಗೆ ಆಗಮಿಸಿದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್ ಸರಕಾರ ಇರುತ್ತೆ. ಹೈಕಮಾಂಡ್ ನನ್ನನ್ನು ಇರಿ ಎಂದರೆ ಇರುತ್ತೇನೆ. ಎಲ್ಲ ತೀರ್ಮಾನ ಮಾಡೋದು ಹೈಕಮಾಂಡ್. ಬೇರೆ ಯಾರ್ ಯಾರೋಮಾತನಾಡಿದರೆ ಅದು ಅವರ ವೈಯಕ್ತಿಕ ಎಂದು ನುಡಿದಿದ್ದಾರೆ.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಮಾಡಬೇಕು, ಅತೀ ಶೀಘ್ರದಲ್ಲಿ ಮಾಡುತ್ತೇವೆ
-ಸಿದ್ದರಾಮಯ್ಯ, ಮುಖ್ಯಮಂತ್ರಿ
ನನ್ನನ್ನು ರಾಹುಲ್ ಗಾಂಧಿ ಇಲ್ಲಿಯವರೆಗೆ ದೆಹಲಿಗೆ ಕರೆದಿಲ್ಲ. ನಾನೂ ಕೂಡ ರಾಹುಲ್ ಗಾಂಧಿಯ ಭೇಟಿಗೆ ಸಮಯ ಕೇಳಿಲ್ಲ. ರಾಹುಲ್ ಗಾಂಧಿ ತಾವಾಗಿಯೇ ನನ್ನನ್ನು ಕರೆದರೆ ನಾನು ಹೋಗುತ್ತೇನೆ. ಆನಂತರವೇ ಸಂಪುಟ ಪುನಾರಚನೆಯೇ ಅಥವಾ ಸಂಪುಟ ವಿಸ್ತರಣೆಯೇ ಎಂಬ ಬಗ್ಗೆ ಗೊತ್ತಾಗುತ್ತದೆ. ಸದ್ಯಕ್ಕಂತ್ತೂ ದೆಹಲಿ ಭೇಟಿ ಇಲ್ಲ ಎಂದು ತಿಳಿಸಿದರು.
ಶೃಂಗೇರಿ ಉಪ ಚುನಾವಣೆ:
ಶೃಂಗೇರಿ ಉಪ ಚುನಾವಣೆ ವಿಚಾರದಲ್ಲಿ ಅಂಚೆ ಮತಗಳನ್ನು ಖುದ್ದು ಜೀವರಾಜ್ ಮತ್ತು ಚುನಾವಣಾ ಸಿಬ್ಬಂದಿ ಸೇರಿಕೊಂಡು ತಿದ್ದಿದ್ದಾರೆ. ಅವತ್ತು ಫಲಿತಾಂಶ ಬರುವಾಗ ಬಿಜೆಪಿ ಸರಕಾರ ಇತ್ತು. ಫಲಿತಾಂಶದ ದಿನ ಮತ ಪತ್ರದಲ್ಲಿ ಇಲ್ಲದ ಗೆರೆ ಈಗ ಹೇಗೆ ಬಂತು. ಈ ವಿಚಾರದಲ್ಲಿ ನಾವು ಕೋರ್ಟ್ ಹೋಗುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿವರುಗಳಾದ ಕೆ.ವೆಂಕಟೇಶ್, ಶಿವರಾಜ್ ತಂಗಡಗಿ, ಶಾಸಕ ಕೆ.ಹರೀಶ್ಗೌಡ, ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಹಾಜರಿದ್ದರು.


