ನಂಜನಗೂಡು: ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡು ಪ್ರಾಣಿಗಳು ಇದೀಗ ಪಟ್ಟಣ ಪ್ರವೇಶಿಸಿವೆ. ಪಟ್ಟಣದ ದೇವರಮ್ಮನಹಳ್ಳಿ ಹುಂಡಿಯಲ್ಲಿ ಕಳೆದ ಮಧ್ಯರಾತ್ರಿ ಚಿರತೆಯೊಂದು ನಗರಸಭೆಯ ಇಂಜಿನಿಯರ್ ಮನೆಯಲ್ಲಿ ಸಾಕಿದ್ದ ನಾಯಿಯನ್ನು ಕೊಂದು ಹೊತ್ತೋಯ್ದಿರುವ ಘಟನೆ ಜರುಗಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಳೆದ ರಾತ್ರಿ 2ರ ಸಮಯದಲ್ಲಿ ಬಂದ ಚಿರತೆ ನಗರಸಭೆಯ ಇಂಜಿನಿಯರ್ ಪ್ರತಿಮಾ ಎಂಬುವರ ಮನೆ ಮುಂಭಾಗ ಕಟ್ಟಿದ್ದ ಸಾಕು ನಾಯಿಯನ್ನು ಹಿಡಿದು ಕೊಂದು ಹಾಕಿದೆ. ಘಟನೆಯಿಂದ ದೇವರಮ್ಮಹಳ್ಳಿ ಹುಂಡಿ ಸುತ್ತ ಮುತ್ತಲ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.



