ಮಂಡ್ಯ: ಮಳವಳ್ಳಿ ತಾಲೂಕಿನ ದಳವಾಯಿಕೋಡಿಹಳ್ಳಿಯಲ್ಲಿ ತಂದೆಯನ್ನು ಕೊಂದು ಮಗ ಪರಾರಿಯಾಗಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಗ್ರಾಮದ ನಿವಾಸಿ ಚಿಕ್ಕಪುಟ್ಟೇಗೌಡ (೭೨) ಎಂಬುವರೇ ಮಗನಿಂದ ಕೊಲೆಯಾಗಿದ್ದು ಆರೋಪಿ ಪ್ರತಾಪ್ ತಲೆ ಮರೆಸಿಕೊಂಡಿದ್ದಾನೆ.

ದಳವಾಯಿಕೋಡಿಹಳ್ಳಿಯ ಜಮೀನಿನಲ್ಲಿ ಚಿಕ್ಕಪುಟ್ಟೇಗೌಡರ ತಲೆಯ ಮೇಲೆ ಸೈಚುಗಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದ್ದು, ಆಸ್ತಿ ವಿಷಯದಲ್ಲಿ ತಂದೆ ಮಗನ ನಡುವೆ ಜಗಳವಾಗಿತ್ತು ಎಂದು ಹೇಳಲಾಗಿದೆ. ಸದ್ಯ ಅರೋಪಿ ಪ್ರತಾಪ್ ತಲೆ ಮರೆಸಿಕೊಂಡಿದ್ದು, ಹಲಗೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರ್ ನಡೆಸಿದ್ದಾರೆ.

ಮೃತ ದೇಹವನ್ನು ಸರಕಾರ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ವಿಭಾಗಕ್ಕೆ ಸ್ಥಳಾಂತರಿಸಲಾಗಿದ್ದು, ಕುಟುಂಬಸ್ಥರು ಯಾರೂ ಸಹ ದೂರು ಕೊಡಲು ಮುಂದೆ ಬಂದಿಲ್ಲ. ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಜಾಲಬೀಸಿದ್ದಾರೆ.

