ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ಪ್ರಗತಿಯನ್ನು ಸಾಧಿಸಿದೆ.
ಮೂರನೇ ದಿನವಾದ ಇಂದು ನಡೆಯುತ್ತಿರುವ ಉತ್ಖನನ ಕಾರ್ಯಾಚರಣೆಯಲ್ಲಿ 6ನೇ ಸ್ಥಳದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ. ಈ ಬೆಳವಣಿಗೆ ಪ್ರಕರಣಕ್ಕೆ ಒಂದು ಉತ್ತಮ ಮೈಲಿಗಲ್ಲನ್ನು ನೀಡಿದೆ.
ನಾವು ಗುರುತಿಸಿದ ಸ್ಥಳ ಸಂಖ್ಯೆ 6 ರಲ್ಲಿ ಭಾಗಶಃ ಅಸ್ಥಿಪಂಜರದ ಅವಶೇಷಗಳು ಕಂಡುಬಂದಿವೆ ಎಂದು ಎಸ್ಐಟಿಯ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ಮಾಹಿತಿ ನೀಡಿದೆ.
ಎಸ್ಐಟಿ ದಳ ನೇತ್ರಾವತಿ ನದಿಯ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಸಾಕ್ಷಿ-ದೂರುದಾರರ ಸಮ್ಮುಖದಲ್ಲಿ 6ನೇ ಸ್ಥಳದಲ್ಲಿ ಶೋಧ ಕಾರ್ಯವನ್ನು ಪ್ರಾರಂಭಿಸಿತು.
ಎಸ್ಐಟಿಯು ಧರ್ಮಸ್ಥಳದ ಕಾಡುಪ್ರದೇಶದಲ್ಲಿ ಗುರುತಿಸಲಾದ ಪಾಯಿಂಟ್ ನಂಬರ್ 6 ರಲ್ಲಿ ಹಿಟಾಚಿ ಯಂತ್ರವನ್ನು ಬಳಸಿ ಉತ್ಖನನ ಕಾರ್ಯವನ್ನು ಕೈಗೊಂಡಿತು. ಈ ಸ್ಥಳದಲ್ಲಿ ನಡೆದ ಒಂದೂವರೆ ಗಂಟೆಗಳ ತೀವ್ರ ಶೋಧದ ನಂತರ, ಮೂಳೆ ರೀತಿಯ ವಸ್ತು ಪತ್ತೆಯಾಗಿದೆ.
ನಂತರ ಆ ವಸ್ತುವನ್ನು ಎಚ್ಚರಿಕೆಯಿಂದ ಸಂಗ್ರಹಿಸಿ, ಫಾರೆನ್ಸಿಕ್ ವಿಶ್ಲೇಷಣೆಗಾಗಿ ರವಾನಿಸಲಾಗಿದೆ. ಈ ಕಳೇಬರವು ಮಾನವನದ್ದೇ ಎಂಬುದನ್ನು ಖಚಿತಪಡಿಸಲು ಡಿಎನ್ಎ ಪರೀಕ್ಷೆ ಸೇರಿದಂತೆ ವೈಜ್ಞಾನಿಕ ವಿಶ್ಲೇಷಣೆ ನಡೆಸಲಾಗುವುದು ಎಂದು ಎಸ್ಐಟಿ ಮೂಲಗಳು ತಿಳಿಸಿವೆ. ಇನ್ನೂ ಕೂಡ ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಸಹಾಯವಾಣಿ ಆರಂಭ
ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎಸ್ಐಟಿ ತಂಡ ತುರ್ತು ಸಹಾಯವಾಣಿಯನ್ನು ಆರಂಭಿಸಿದೆ.
ಎಸ್ಐಟಿ ಅಧಿಕಾರಿಗಳು ಶವಗಳನ್ನು ಹೂತಿಟ್ಟಿರುವುದರ ಕುರಿತು ಮಾಹಿತಿ ನೀಡಲು ಕಚೇರಿಯನ್ನು ಸಂಪರ್ಕಿಸಲು ಸಹಾಯವಾಣಿ ತೆರೆದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡಲು ವಾಟ್ಸಾಪ್ ಸಂಖ್ಯೆ 8277986369 ಅಥವಾ ದೂರವಾಣಿ ಸಂಖ್ಯೆ 0824-2005301 ಅಥವಾ sitdps@ksp.gov.in ಗೆ ಇಮೇಲ್ ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂದು ಮನವಿ ಮಾಡಿದ್ದಾರೆ.
ಧರ್ಮಸ್ಥಳದ ನೇತ್ರಾವತಿ ಘಾಟ್ ಬಳಿಯ ಕಾಡುಪ್ರದೇಶದಲ್ಲಿ 1998 ರಿಂದ 2014ರವರೆಗೆ ನೂರಾರು ಮಹಿಳೆಯರು ಮತ್ತು ಮಕ್ಕಳ ಶವಗಳನ್ನು ಹೂತಿಟ್ಟಿದ್ದೇನೆ ಎಂದು ಸ್ವಚ್ಛತಾ ಕಾರ್ಮಿಕ ಅನಾಮಿ ವ್ಯಕ್ತಿ ಆರೋಪಿಸಿದ್ದ.
ಈ ಶವಗಳು ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದವು ಎಂದು ದೂರುದಾರ ತಿಳಿಸಿದ್ದು, ಈ ಆರೋಪದಿಂದ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಜುಲೈ 19, 2025 ರಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಡಾ. ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್ಐಟಿಯನ್ನು ರಚಿಸಿದೆ.
ಎಸ್ಐಟಿಯು ಈಗಾಗಲೇ 29 ಸದಸ್ಯರ ತಂಡವನ್ನು ಹೊಂದಿದ್ದು, ಇತ್ತೀಚೆಗೆ 9 ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ತಂಡವು ದೂರುದಾರನ ಹೇಳಿಕೆಯ ಆಧಾರದ ಮೇಲೆ ಗುರುತಿಸಲಾದ 13 ಸ್ಥಳಗಳಲ್ಲಿ ಉತ್ಖನನ ಕಾರ್ಯವನ್ನು ತೀವ್ರಗೊಳಿಸಿದೆ. ಈಗಾಗಲೇ 6 ಸ್ಥಳಗಳಲ್ಲಿ ಅಗೆತ ಕಾರ್ಯ ನಡೆದಿದ್ದು, ಇನ್ನೂ ಉಳಿದ 7 ಗುಂಡಿಗಳ ಉತ್ಖನನ ಕಾರ್ಯ ಬಾಕಿ ಇದೆ.


