ಸೂಕ್ಷ್ಮ ಪ್ರದೇಶಗಳಲ್ಲಿ ಬಾಂಬ್ಸ್ಕ್ವಾಡ್, ಶ್ವಾನದಳ, ಡ್ರೋಣ್ ಸರ್ಚ್
ಶಿವಮೊಗ್ಗ, ಆಗಸ್ಟ್ 5 (www.vijayakaala.com) : ಗೌರಿ-ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಲು ಆರಂಭಿಸಿದ್ದಾರೆ. ಹಬ್ಬಗಳು ಹತ್ತಿರ ಬರುತ್ತಿರುವ ಬೆನ್ನಲ್ಲೆ ರಾಗಿಗುಡ್ಡ ಸೇರಿದಂತೆ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ರೂಟ್ ಮಾರ್ಚ್ ನಡೆಸ್ತಿದ್ದಾರೆ. (Route March). ಇಷ್ಟೆ ಅಲ್ಲದೆ ಶ್ವಾನದಳ, ಬಾಂಬ್ಸ್ಕ್ವಾಡ್ ಹಾಗೂ ಡ್ರೋಣ್ ಬಳಕೆಯನ್ನು ಆರಂಭಿಸಿ, ಸೂಕ್ಷ್ಮ ಪ್ರದೇಶಗಳಲ್ಲಿ ಪರಿಶೀಲನೆ ನಡೆಲಾಗಿದೆ.
ಆಗಸ್ಟ್ 4, 2025 ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್ (District Police) ಮತ್ತು ವಿಶೇಷ ಕಾರ್ಯಪಡೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ನಗರದ ಹಲವೆಡೆ ರೂಟ್ ಮಾರ್ಚ್ ನಡೆಸಿದೆ.
ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪಿಎಸ್ಐ ಸಿದ್ದಪ್ಪ ಅವರ ನೇತೃತ್ವದಲ್ಲಿ, ಟಿಪ್ಪುನಗರದಿಂದ ರೂಟ್ ಮಾರ್ಚ್ ಆರಂಭಿಸಿ ವಿನಾಯಕ ವೃತ್ತ, ಟಿಪ್ಪು ನಗರ ಚಾನೆಲ್ ಮೂಲಕ ಕೆಳ ತುಂಗಾನಗರದಲ್ಲಿ ಮುಕ್ತಾಯಗೊಳಿಸಲಾಗಿದೆ. ಇತ್ತ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪಿಎಸ್ಐ ಸ್ವಪ್ನ ಅವರ ನೇತೃತ್ವದಲ್ಲಿ ರಾಗಿಗುಡ್ಡದ ಪ್ರಮುಖ ರಸ್ತೆಗಳು, ಸರ್ಕಲ್ಗಳು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.
ಸೂಕ್ಷ್ಮ ಪ್ರದೇಶಗಳಲ್ಲಿ ತಪಾಸಣೆ
ಇನ್ನು ಹಬ್ಬಗಳ ಹಿನ್ನೆಲೆಯಲ್ಲಿ ಭದ್ರತೆಯನ್ನು ಖಾತರಿಪಡಿಸುವ ಸಲುವಾಗಿ, ಎಎಸ್ಸಿ ತಂಡ (ASC team), ಶ್ವಾನದಳ (Dog Squad), ಮತ್ತು ಡ್ರೋನ್ ಕ್ಯಾಮರಾ ತಂಡಗಳು ನಗರದ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಿವೆ.
ಹನುಮಂತ ನಗರ, ವೆಂಕಟೇಶ್ ನಗರ, ಚೌಡೇಶ್ವರಿ ದೇವಸ್ಥಾನದ ಬಳಿ, ಅಮೀರ್ ಅಹ್ಮದ್ ಕಾಲೋನಿ ಸೇರಿದಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಹಲವು ಸ್ಥಳಗಳಲ್ಲಿಯೂ ಭದ್ರತಾ ಪರಿಶೀಲನೆ ನಡೆಸಿದ್ದಾರೆ.


