ಮೈಸೂರು: ಹೆಸರಾಂತ ಸಾಹಿತಿ ಎಸ್.ಎಲ್. ಭೈರಪ್ಪನವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಹಾಸನ ಮೂಲದ ಭೈರಪ್ಪನವರು ಮೈಸೂರಿನಲ್ಲಿಯೇ ನೆಲೆಗೊಂಡಿದ್ದರು.
ಸರಸ್ವತಿ ಸಮ್ಮಾನ್, ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಸಾಕಷ್ಟು ಗೌರವಗಳಿಗೆ ಪಾತ್ರರಾಗಿದ್ದ ಭೈರಪ್ಪ ಅವರ ಕೃತಿಗಳು ಇಂಗ್ಲೀಷ್ ಸೇರಿ ದೇಶದ ನಾನಾ ಭಾಷೆಗಳಿಗೆ ಅನುವಾದಗೊಂಡಿದ್ದವು. ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದರು. ನಂತರ ಕಾಲೇಜು ಶಿಕ್ಷಣಕ್ಕಾಗಿ ಮೈಸೂರಿಗೆ ಆಗಮಿಸಿ ಇಲ್ಲಿಯೇ ನೆಲೆಗೊಂಡು ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದರು. ತಬ್ಬಲಿ ನೀನಾದ ಮಗನೆ, ದಾಟು, ವಂಶವೃಕ್ಷ, ಧರ್ಮಶ್ರೀ, ಪರ್ವ, ಗೃಹಭಂಗ, ಯಾನ ಸೇರಿ ಹಲವಾರು ಕಾದಂಬರಿಗಳನ್ನು ರಚಿಸಿದ್ದಾರೆ. ಇವರ ಆತ್ಮಕತೆ ಭಿತ್ತಿ.
ರಾಮಾಯಣ, ಮಹಾಭಾರತದ ಐತಿಹಾಸಿಕ ಕಥಾವಸ್ತುಗಳನ್ನು ಇಟ್ಟುಕೊಂಡು ಅವುಗಳಿಗೆ ಹೊಸ ಹೊಳಹು ಕೊಟ್ಟವರು ಭೈರಪ್ಪ. ಇವರ ತಬ್ಬಲಿ ನೀನಾದ ಮಗನೆ ಕೃತಿ ಸೇರಿ ಕೆಲವಾರು ಕೃತಿಗಳು ಸಿನಿಮಾಗಳಾಗಿ ತೆರೆಕಂಡಿವೆ.


