ಬೆಳಗಾವಿ: 2023ರಲ್ಲಿ ನನ್ನ ಮತ್ತು ಹೈ-ಕಮಾಂಡ್ ನಡುವೆ ಯಾವುದೇ ಒಪ್ಪಂದವಾಗಿಲ್ಲ. 5 ವರ್ಷಕ್ಕೆ ಸಿಎಂ ಆಗಿ ನನ್ನನ್ನೇ ಆಯ್ಕೆ ಮಾಡಿದ್ದಾರೆ. ಎರಡೂವರೆ ವರ್ಷ ಎರಡೂವರೆ ವರ್ಷ ಎಂದು ನನ್ನ ಮತ್ತು ಡಿಸಿಎಂ ಮಧ್ಯೆ ಯಾವುದೇ ಒಪ್ಪಂದವಾಗಿಲ್ಲ ಎಂದು ಬೆಳಗಾವಿ ಸದನದಲ್ಲಿ ಮೂರು ಬಾರಿ ಹೇಳುವ ಮೂಲಕ ಕೆಲ ತಿಂಗಳಿನಿಂದ ಕಾಂಗ್ರೆಸ್ನಲ್ಲಿ ಭುಗಿಲೆದ್ದಿದ್ದ ನಾಯಕತ್ವ ಬದಲಾವಣೆ ವಿವಾದಕ್ಕೆ ಸದನದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ.
ನಾಯಕತ್ವ ಬದಲಾವಣೆಯ ವಿಷಯವಾಗಿ ವಿಪಕ್ಷಗಳು ಪದೇ ಪದೇ ಸಿಎಂ ಸಿದ್ದರಾಮಯ್ಯ ಅವರನ್ನು ಕಾಲೆಳೆಯುತ್ತಿದ್ದ ಹಿನ್ನಲ್ಲೆಯಲ್ಲಿ ಅಧಿವೇಶನದ ಕೊನೆಯ ದಿನವಾದ ಇಂದು ಉತ್ತರ ಅವರು ʻಮುಂದಿನ ಐದು ವರ್ಷ ನಾನೇ ಸಿಎಂʼ ಎಂದು ಮೂರು ಬಾರಿ ಹೇಳುವ ಮೂಲಕ ವಿಧಾನಸಭೆಯ ಕಡತಕ್ಕೆ ದಾಖಲೆ ಆಗುವ ರೀತಿಯಲ್ಲಿ ಘೋಷಣೆ ಮಾಡಿದರು.
ಹೈಕಮಾಂಡ್ ಸಿಎಂ ಪರ ಇದೆ: ಡಿಕೆಶಿ
ಬೆಂಗಳೂರು: “ಅವರು ಐದು ವರ್ಷ ಇರಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ. ಹೈಕಮಾಂಡ್ ಅವರ ಪರ ಇಲ್ಲ ಎಂದು ಹೇಳಿಲ್ಲ. ಹೈಕಮಾಂಡ್ ಅವರ ಪರ ಇರುವುದಕ್ಕೆ ಅವರು ರಾಜ್ಯದ ಸಿಎಂ ಆಗಿದ್ದಾರೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನನ್ನ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ. ನನ್ನ ಬೇಡಿಕೆ ಈಡೇರಿದೆ, ಹೈಕಮಾಂಡ್ ಅವರ ಪರ ಇದೆ. ಆದ್ದರಿಂದಲೆ ಇಂದು ಅವರು ಮುಖ್ಯಮಂತ್ರಿಯಾಗಿದ್ದಾರೆ. ನಾವು ಒಟ್ಟಾಗಿ ಹೋಗುತ್ತೇವೆ. ಅವರು ಐದು ವರ್ಷ ಇರಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ ಎಂದು ಹೇಳಿದ್ದಾರೆ.
ʻನನಗೆ ರಾಜಕೀಯ ನಿಶಕ್ತಿ ಯಾವಾಗಲೂ ಇಲ್ಲ. ರಾಜಕೀಯವನ್ನು ಅಷ್ಟೊಂದು ತಲೆ ಕೆಡೆಸಿಕೊಳ್ಳುವ ಅವಶ್ಯಕತೆಯೂ ಇಲ್ಲ. ಜನರು ಆಶೀರ್ವಾದ ಮಾಡಿದ್ರೆ ಮಾತ್ರ ಅಧಿಕಾರಕ್ಕೆ ಬರೋದು. ಅಂತಿಮವಾಗಿ ಪ್ರಜಾಪ್ರಭುತ್ವದಲ್ಲಿ ಮತದಾರ ಪ್ರಭುಗಳು ತಾನೇ ರಾಜಕೀಯ ಶಕ್ತಿ ನಿರ್ಧಾರ ಮಾಡೋದು ಎಂದು ತಿಳಿಸಿದರು.
ʻನನಗೆ ರಾಜಕೀಯದಲ್ಲಿ ನಿಶ್ಯಕ್ತಿ ಅನ್ನೋದೇ ಇಲ್ಲವೇ ಇಲ್ಲ, ಮುಂದೆಯೂ ಇಲ್ಲ, ಇವಾಗ್ಲೂ ಕೂಡ ಇಲ್ಲ. ನೀವು ಏನಾದರೂ ಹಾಗೇ ಅಂದುಕೊಂಡರೆ ಅದು ತಪ್ಪು ಮಾಹಿತಿ ಎಂದ ಬಿಜೆಪಿ ನಾಯಕರಿಗೆ ಸಿಎಂ ಹೇಳಿದರು.
‘5 ವರ್ಷ ಸಿದ್ದರಾಮಯ್ಯನವರೇ ಸಿಎಂ’ :
ಯತ್ನಾಳ್ ನಿಮಗೆ ಬಹಳಷ್ಟು ಸಂಶಯಗಳು ಇದ್ದವು. ಅದಕ್ಕೆ ನಿಮ್ಮನ್ನು ಬಿಜೆಪಿ ಪಕ್ಷದಿಂದ ಹೊರಗೆ ಹಾಕಿದ್ರು ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ನಿಮ್ಮನ್ನು ಕುತಂತ್ರದಿಂದ ಹೊರಗೆ ಹಾಕಿಲ್ಲವಾ? ಎಂದು ಯತ್ನಾಳ್ ಮರುಪ್ರಶ್ನೆ ಮಾಡಿದರು. ಬಳಿಕ ಯತ್ನಾಳ್, ಇವಾಗ ಖಚಿತ ಆಯ್ತು ಸಿದ್ದರಾಮಯ್ಯನೇ ಐದು ವರ್ಷ ಪೂರ್ಣಗೊಳಿಸ್ತಾರೆ ಎಂದಿದ್ದಾರೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಯತ್ನಾಳ್ ನಡುವೆ ಮಾತಿನ ಸಮರಸ ನಡೆಯಿತು.


