ಭಾರೀ ಮಳೆಗೆ ಐತಿಹಾಸಿಕ ಕಟ್ಟಡ ಹಾನಿ
ಹಾಸನ (ಸಕಲೇಶಪುರ): ಭಾರೀ ಮಳೆಯಿಂದಾಗಿ ಐತಿಹಾಸಿಕ ಹಿನ್ನೆಲೆಯುಳ್ಳ ಮಂಜರಾಬಾದ್ ಕೋಟೆಯ ಒಂದು ಭಾಗ ಶನಿವಾರ ತಡರಾತ್ರಿ ಕುಸಿದಿದೆ. ಸೈನಿಕರು ವಿಶ್ರಾಂತಿ ಪಡೆಯುತ್ತಿದ್ದ ಕೋಟೆಯ ಭಾಗ ಎಂದು ಹೇಳಲಾಗುವ ಪ್ರದೇಶವು ಕುಸಿದುಬಿದ್ದಿದೆ. ಮುಂಜಾನೆ ಕೋಟೆಯ ಕಾವಲು ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಬಂದಾಗ ಕುಸಿತಗೊಂಡಿರುವುದು ಗೊತ್ತಾಗಿದೆ.
ನಕ್ಷತ್ರಾಕಾರದ ಕೋಟೆ: ನಕ್ಷತ್ರಾಕಾರದಲ್ಲಿರುವ ಮಂಜರಾಬಾದ್ ಕೋಟೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ನೂರಾರು ಪ್ರವಾಸಿಗರು ಪ್ರತಿನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಹಾಗೂ ಐತಿಹಾಸಿಕ ಮಂಜರಾಬಾದ್ ಕೋಟೆಯನ್ನು 1792ರಲ್ಲಿ ಟಿಪ್ಪು ಸುಲ್ತಾನ್ ಕಟ್ಟಿಸಿದ್ದರು.
ಈ ಬೃಹತ್ ಕೋಟೆಯು ಸಮುದ್ರ ಮಟ್ಟದಿಂದ 988 ಮೀಟರ್ ಎತ್ತರದಲ್ಲಿದೆ. ಆಕಾಶವು ಮೋಡಗಳಿಲ್ಲದೇ ಶುಭ್ರವಾಗಿದ್ದಲ್ಲಿ ಈ ಕೋಟೆಯಿಂದ ಅರಬ್ಬಿ ಸಮುದ್ರವನ್ನು ಸಹ ನೋಡಬಹುದು ಎಂಬ ಮಾತಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಕೇಂದ್ರದಿಂದ 5 ಕಿ.ಮೀ. ಅಂತರದಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅಡಾಣಿ ಗುಡ್ಡದ ಮೇಲೆ ಈ ಕೋಟೆ ನಿರ್ಮಾಣವಾಗಿದೆ.
3393 ಅಡಿಗಳು, 252 ಮೆಟ್ಟಿಲುಗಳನ್ನು ಹತ್ತಿದರೇ ಸಿಗುವ ಈ ಕೋಟೆಯ ನಕ್ಷೆ ವಿಶಿಷ್ಟ ತಂತ್ರವನ್ನು ಒಳಗೊಂಡಿದೆ. ಈ ಕೋಟೆಯ ಸಂರಕ್ಷಣಾ ಜವಾಬ್ದಾರಿಯನ್ನು 1956 ರಿಂದ ಪುರಾತತ್ವ ಇಲಾಖೆಯು ವಹಿಸಿಕೊಂಡಿದೆ.
ಕೆಲಕಾಲ ಪ್ರವಾಸಿಗರಿಗೆ ನಿರ್ಬಂಧ: ಕೋಟೆಯ ಒಂದು ಭಾಗ ಕುಸಿದ ಹಿನ್ನೆಲೆಯಲ್ಲಿ ಇಂದು ಬಂದಿರುವ ಕೋಟೆ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ಪ್ರವಾಸಿಗರು ನಿರಾಸೆಯಿಂದ ವಾಪಸಾದರು.

