Online News in ಕನ್ನಡ

ʻಮಾನ್ಯʼ ಹೆಸರಿನಲ್ಲಿ ಮರ್ಯಾದೆ ಹತ್ಯೆ ತಡೆ ಕಾಯ್ದೆ ಜಾರಿಗೆ ಆಗ್ರಹಿ ಸಹಿ ಸಂಗ್ರಹ

ಶಿವಮೊಗ್ಗ, ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ ೭ ತಿಂಗಳ ಗರ್ಭಿಣಿ ಮಗಳು ʻಮಾನ್ಯಾʼಳನ್ನು ಕೊಂದು, ಈಕೆಯ ಪತಿಯ ಕುಟುಂಬದ ಸದಸ್ಯರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ ʻಮರ್ಯಾದೆ ಹತ್ಯೆʼ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ʻಮಾನ್ಯʼ ಹೆಸರಿನಲ್ಲಿ ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಹಿರಿಯ ಪತ್ರಕರ್ತ ಎನ್.‌ ರವಿಕುಮಾರ್‌ (ಟೆಲಕ್ಸ್‌ ) ಒತ್ತಾಯಿಸಿದ್ದಾರೆ.
ಮರ್ಯಾದೆ ನೆಪದಲ್ಲಿ ನಡೆಯುವ ಇಂತಹ ಹತ್ಯೆಗಳನ್ನು ತಡೆಗಟ್ಟಲು ಮೃತಪಟ್ಟ ಮಾನ್ಯ ಹೆಸರಿನಲ್ಲಿ ಕಾಯ್ದೆ ರಚಿಸಬೇಕು ಎಂದು ಆಗ್ರಹಿಸಿ ಸಮಾನಮನಸ್ಕರ ಬಳಗ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿರುವ ಸಹಿ ಸಂಗ್ರಹ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ಪತ್ರಕರ್ತರು, ಸಾಹಿತಿಗಳು ಚಿಂತಕರು ಪ್ರಗತಿಪರ ಸಂಘಟನೆಗಳು ಕೈಜೋಡಿಸಿದ್ದಾರೆ.
ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ನ ಪತ್ರಿಕಾ ಭವನದಲ್ಲಿ ಶನಿವಾರದಂದು ಪತ್ರಕರ್ತ ದೇಶಾದ್ರಿ ಹೊಸಮನೆ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಇನಾಂವೀರಾಪುರದಲ್ಲಿ ದಲಿತ ಯುವಕನನ್ನ ವಿವಾಹವಾದ ಕಾರಣಕ್ಕೆ ಜಾತಿ ಪ್ರತಿಷ್ಠೆಗಾಗಿ ಸ್ವಂತ ಮಗಳನ್ನೇ ಗರ್ಭಿಣಿಯೆಂದು ಲೆಕ್ಕಿಸದೇ ಹತ್ಯೆ ಮಾಡಿರುವುದು ಸಮಾಜದ ಆಶಯಕ್ಕೆ ವಿರುದ್ದವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮರ್ಯಾದಾಗೇಡು ಪ್ರಕರಣಗಳು ಹೆಚ್ಚಾಗುತ್ತಿದ್ದು ಕಾನೂನಿನ ಭಯವೇ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಭೇಟಿ-ಮನವಿ
ಮರ್ಯಾದಾ ಹತ್ಯೆ ಹೆಸರಿನ ಜಾತಿ ಭಯೋತ್ಪಾದನೆಗೆ ತಡೆಗೆ ಕಠಿಣ ಕಾನೂನಿನ ಅಗತ್ಯತೆ ಹೆಚ್ಚಾಗಿದೆ. ಮಾನ್ಯಾ ಹೆಸರಲ್ಲೇ ಮರ್ಯಾದಾ ಹತ್ಯೆ ತಡೆ ಕಾಯ್ದೆ ಜಾರಿಗೆ ಒತ್ತಾಯಿಸಿ ಸಮಾನಮನಸ್ಕರ ಬಳಗ ಡಿ. 30 ರಂದು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಲಿದೆ. ಕಾನೂನಿನ ಭಯವಿಲ್ಲದೇ ಇರುವುದರಿಂದಲೇ ಸಮಾಜದಲ್ಲಿ ಜಾತಿ ಕ್ರೌರ್ಯ ಹೆಚ್ಚಾಗುತ್ತಿದ್ದು ಗರಿಷ್ಠ ಶಿಕ್ಷೆ ವಿಧಿಸುವ ಮರ್ಯಾದೆ ಹತ್ಯೆ ತಡೆಗೆ ನೂತನ ಕಾನೂನು ರೂಪಿಸಬೇಕಿದೆ.
ಮರ್ಯಾದೆ ಹತ್ಯೆ ತಡೆಗಾಗಿ ಸುಪ್ರೀಂಕೋರ್ಟ್ ಮಾರ್ಗಸೂಚಿಗಳಿವೆ ಅದನ್ನು ರಾಜ್ಯಸರ್ಕಾರಗಳು ಅಳವಡಿಸಿಕೊಳ್ಳಬೇಕಿದೆ.
ಈ ನಿಟ್ಟಿನಲ್ಲಿ ನಮ್ಮ ಅಭಿಯಾನದ ಮುಖಾಂತರ ಹೊಸ ಕಾನೂನು ಜಾರಿಗೆ ಸಿಎಂಗೆ ಆಗ್ರಹಿಸಲಿದ್ದೇವೆ ಸಿಎಂ ಸಿದ್ದರಾಮಯ್ಯ ಮನವಿಗೆ ಪೂರಕವಾಗಿ ಸ್ಪಂದಿಸುವ ವಿಶ್ವಾಸ ವ್ಯಕ್ತಪಡಿಸಿದರು.
ದೇಶಾದ್ರಿ ಹೊಸಮನೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Call Now Button